ಯಂಡಮೂರಿ ವೀರೇಂದ್ರನಾಥ್ ರವರ “ಯುಗಾಂತ್ಯಂ” ತೆಲುಗು ಕಾದಂಬರಿಯ ಕನ್ನಡ ಅನುವಾದವೇ ರವಿಬೆಳೆಗೆರೆಯವರ “ನಕ್ಷತ್ರ ಜಾರಿದಾಗ”. ಮನುಷ್ಯನಿಗೆ ತನ್ನ ಜೀವದ ಮೇಲಿರುವ ಆಸೆ, ಅಪಾರ. ತನ್ನ ಜೀವ-ಜೀವನಕ್ಕಾಗಿ ನೈತಿಕವಾಗಿ, ಸಾಮಾಜಿಕವಾಗಿ ಸಾಯುತ್ತಾ ಬದುಕುತ್ತಾನೆ. ಎಲ್ಲೊ ಪ್ರಳಯವೊ, ಭೂಕಂಪವಾಯಿತೆಂದರೆ, ಮೊದಲು ತಾನು ನಿಂತ ನೆಲ ಪರೀಕ್ಷಿಸಿ ನೋಡುತ್ತಾನೆ…ಹಾಗಿರುವಾಗ ಇಡೀ ಭೂಮಿಯೇ ಒಡೆದು ಚೂರು ಚೂರಾದರೆ ಅಬ್ಬಾ!!!! ಘೋರ ಕಲ್ಪನೆಯಲ್ಲವೆ? ಹೌದು, ನಕ್ಷತ್ರ ಜಾರಿದಾಗ ಇಂತಹ ಭಯಂಕರ ಕಲ್ಪನೆಯ ಕಾದಂಬರಿ. ಪ್ರಾಕ್ಸಿಮಾ ಸೆಂಕ್ಚುವರೀ ಎಂಬ ಗ್ರಹವು ದಿನೇ ದಿನೇ ಭೂಮಿಯ ಹತ್ತಿರಕ್ಕೆ ಬರುತ್ತದೆ, ಕೊನೆಯ ದಿನ ಅದು ಭೂಮಿಯ ಕಕ್ಷೆಯಲ್ಲಿ ಮೂರು ಸೆಕೆಂಡುಗಳ ಕಾಲ ಹಾದು ಹೋಗುತ್ತದೆ, ಆಗ ಅದರ ಗುರುತ್ವಾಕರ್ಷಣೆಯ ಶಕ್ತಿಯಿಂದಾಗಿ, ಭೂಮಿಯ ಮೇಲಿರುವ ವಸ್ತುಗಳು ಸೆಳೆಯಲ್ಪಡುತ್ತವೆ, ಇಂತಹ ಒತ್ತಡದಿಂದಾಗಿ ಭೂಮಿ ಒಡೆದು ಚೂರಾಗುತ್ತದೆಂದು, ಇಡೀ ವಿಶ್ವದ ಮುಂದುವರೆದ ದೇಶಗಳು ಒಪ್ಪುತ್ತವೆ. ದಿನ ಹತ್ತಿರವಾಗುತಿದ್ದಂತೆ, ಜನರ ವರ್ತನೆ,ಸಹಸ್ರ ವರ್ಷಗಳಿಂದ ನಮ್ಮ ಕಥೆ, ಕವನಗಳಿಗೆ ಸ್ಪೂರ್ತಿಯಾದ ಚಂದ್ರ ಆಗಸದಿಂದ ಮರೆಯಾಗುತ್ತಾನೆ, ಇಡಿ ಜಗತ್ತು ಸೂರ್ಯ ಚಂದ್ರರಿಲ್ಲದೆ ಕತ್ತಲಾಗುತ್ತದೆ….ದಿನೇ ದಿನೇ ಭೂಮಿ ಬಿರುಕುಬಿಟ್ಟು ಸಾವಿರಾರು ಜನರು ಸಾಯುತ್ತಿರುತ್ತಾರೆ,ಬೆಟ್ಟ ಪರ್ವತಗಳೆಲ್ಲ ಸಿಡಿಯುತ್ತವೆ. ಇಂತಹ ಭೀಕರ ದೃಶ್ಯಗಳು ಸ್ವತಃ ನಾವೆ ಅನುಭವಿಸುತ್ತಿರುವಂತೆ ಭಯಮೂಡಿಸುತ್ತವೆ. ಪುಸ್ತಕ ಮುಗಿದ ಮೇಲೆ , ಅಬ್ಬಾ!!! ಬರೀ ಕಾದಂಬರಿಯೆಂದು ಬೆವರನ್ನೊಮ್ಮೆ ಒತ್ತಿ, ಆರಾಮದ ಉಸಿರು ಬಿಡಬಹುದು….ಆದರೂ ಆ ದೃಶ್ಯಗಳು ಕೆಲವು ದಿನ ನಮ್ಮ ಮುಂದೆ ಸುಳಿಯದೇ ಇರಲಾರವು…