ಹಿರಿಯ ಸಾಹಿತ್ಯ ಸೇವಿ ಕೆ. ಶ್ರೀನಾಥ್ ಅವರು ರಷ್ಯನ್ ಕ್ಲಾಸಿಕ್ ಸಾಹಿತ್ಯದ ಅದ್ಭುತ ಕಾದಂಬರಿ ಫ್ಯೋದರ್ ದಾಸ್ತೋವ್ಸ್ಕಿ ಅವರ ಮೇರು ಕೃತಿ 'ದ ಈಡಿಯಟ್' (The Idiot) ಯನ್ನು ಅತ್ಯಂತ ಸೊಗಸಾದ ಶೈಲಿಯಲ್ಲಿ ಕನ್ನಡಕ್ಕೆ ತಂದಿದ್ದಾರೆ.
ದ ಈಡಿಯಟ್' ಕಾದಂಬರಿಯು ಒಳ್ಳೆಯದು ಮತ್ತು ಕೆಟ್ಟದರ ನಡುವಿನ ನಿರಂತರ ಹೋರಾಟದ ಬಗ್ಗೆ ಆಳವಾಗಿ ಪರಿಶೋಧಿಸುತ್ತದೆ ಎಂದು ಹಲವು ವಿಮರ್ಶಕರು ಗುರುತಿಸುತ್ತಾರೆ. ಆ ಹೋರಾಟವು ಬಾಹ್ಯದ ಹೋರಾಟವಷ್ಟೇ ಆಗಿರದೆ ಪಾತ್ರಗಳ ಆಂತರಿಕ ಹೋರಾಟಗಳ ಬಗ್ಗೆಯೂ ಕೂಡ ವಿಷದವಾಗಿ ಪರಿಶೀಲಿಸುತ್ತದೆ. ಎಲ್ಲ ಜನರಲ್ಲಿನ ಮೂಲಭೂತವಾದ ಒಳಿತಿನ ಬಗೆಗಿನ ಮೂಯಿಷ್ಠಿನ್ನ ಪ್ರಶ್ನಾತೀತವಾದ ನಂಬಿಕೆಯು ಉಳಿದವರ ನಡೆಗಳಿಂದ ನಿರಂತರವಾಗಿ ಒರೆಗಲ್ಲಿನ ಪರೀಕ್ಷೆಗೆ ಗುರಿಯಾಗುತ್ತಿರುತ್ತದೆ.
ಈ ಕಾದಂಬರಿಯು ಸಮಾಜ ಮತ್ತು ವ್ಯಕ್ತಿಯ ನಡುವೆ ಇರುವಂತಹ ಉದ್ವಿಘ್ನತೆಗಳನ್ನು ಅನ್ವೇಷಣೆಗೆ ಗುರಿಪಡಿಸುತ್ತದೆ. ಮೂಯಿಷ್ಠಿನ್ನ ವಿಶಿಷ್ಟವಾದಂತಹ ದೃಷ್ಟಿಕೋನ ಮತ್ತು ಮೌಲ್ಯಗಳು ಸೆಂಟ್ ಪೀಟರ್ಸಬರ್ಗ್ನಲ್ಲಿ ಸ್ಥಾಪಿತವಾದಂತಹ ನಿಯಮಗಳ ಮತ್ತು ನಿರೀಕ್ಷೆಗಳ ಜೊತೆಯಲ್ಲಿ ಸಂಘರ್ಷಿಸುತ್ತವೆ; ಇದು ದುರಂತ ಮತ್ತು ವೈರುಧ್ಯಕ್ಕೆ ಎಡೆಮಾಡಿಕೊಡುತ್ತದೆ. ಈ ಸಂಘರ್ಷವನ್ನು ಎಲ್ಲ ಸಂಕೀರ್ಣತೆಗಳೊಂದಿಗೆ ಚಿತ್ರಿಸಿರುವುದಕ್ಕಾಗಿಯೇ ಇದನ್ನು ಕಾಲಾತೀತವಾದ ಮೇರು ಕೃತಿ ಎಂದು ಬಣ್ಣಿಸಲಾಗಿದೆ.