ಕನ್ನಡದ ಮಟ್ಟಿಗೆ ಸ್ತ್ರೀವಾದಿ ನೆಲೆಯಲ್ಲೂ ,ಸರ್ಜನಶೀಲತೆಯ ಹಲ ದಿಕ್ಕುಗಳ ಚಾಚಿಕೊಂಡ ಆಯಾಮಗಳಲ್ಲೂ ಬರಹಗಾರ್ತಿಯಾಗಿ ನೇಮಿಚಂದ್ರ ಬಹುಮುಖ್ಯ ಹೆಸರು. ವ್ಯಾನ್ಗೋನ ಕುರಿತಾದ ಅವರ ಪುಟ್ಟ ಪುಸ್ತಕ 'ನೋವಿಗದ್ದಿದ ಕುಂಚ' ಎಷ್ಟು ಪ್ರಭಾವಶಾಲಿಯಾಗಿ ನಮ್ಮೊಳಗೆ ಇಳಿಯುತ್ತದೆ ಎಂದರೆ ವ್ಯಾನ್ ಗೋ ನಮ್ಮವನೇ ಎನಿಸಿಬಿಡುತ್ತಾನೆ. ಇದಲ್ಲದೆ 'ಯಾದ್ ವಶೇಂ' ಕಾದಂಬರಿ, ಕಥೆಗಳು, ಬದುಕ ಬದಲಿಸಬಹುದು ಸರಣಿ, ಪೆರುವಿನ ಪವಿತ್ರ ಕಣಿವೆಯಲ್ಲಿ ಪ್ರವಾಸಕಥನ ಇದೆಲ್ಲದರಲ್ಲೂ ನೇಮಿಚಂದ್ರರದೇ ಎಂದು ಹೇಳಬಹುದಾದ ಛಾಪಿದೆ. ಈ ಪ್ರವಾಸ ಕಥನ ಇವತ್ತಿನದಲ್ಲ. ಇದು ಸರಿ ಸುಮಾರು ಎರಡು ದಶಕ ಮೊದಲಿದ್ದು. ಲೇಖಕಿ ತನ್ನ ಗೆಳತಿ ಹೇಮಲತಾ ಮಹಿಷಿ ಅವರ ಜೊತೆಗೂಡಿ ಹೊರಟದ್ದು. ಪೈಸೆಗೆ ಪೈಸೆಗೆ ಜೋಡಿಸಿ ಕಂಡ ಕನಸಿನ ಬೆನ್ನು ಹತ್ತಿದ್ದು. ಹಾಗಾಗಿ ಇಲ್ಲಿ ಅವರ ಅನುಕ್ಷಣದ ಹಣ ಉಳಿಸುವ ಪಡಿಪಾಟಲು, ಕನಸು ನನಸಾಗಿಸುವ ತವಕ ಎಲ್ಲವೂ ಕ್ಯಾನ್ವಾಸ್ಗೆ ಹತ್ತಿದ ಗಾಢ ಬಣ್ಣದ ಹಾಗೆ ನಮ್ಮೊಳಗೆ ಅಂಟಿ ನಿಲ್ಲುತ್ತದೆ. ಈ ಪ್ರವಾಸ ಕಥನ ಈಗ ಓದುವಾಗ ಎರಡು ದಶಕ ಮೊದಲು ಅವರು ವಿದೇಶೀ ನೆಲದಲ್ಲಿ 'ಸದ್ಯ ನಮ್ಮ ದೇಶದಲ್ಲಿ ಹೀಗಿಲ್ಲ' ಎಂದು ಗಾಬರಿಪಟ್ಟದ್ದೆಲ್ಲ ಈಗ ಇಲ್ಲಿಗೆ ಬಂದಿರುವುದು ಕಣ್ಣಿಗೆ ರಾಚುತ್ತದೆ. ಆ ಅನುಭವಕ್ಕಾದರೂ ಇದು ವಿಶಿಷ್ಟ.