TY - BOOK AU - UDAYA KUMAR HABBU TI - Tyakta: ತ್ಯಕ್ತ U1 - K894.3 UDAT PY - 2014/// CY - KinnigOLi PB - Ananta Pratibha Prakashana KW - Tyakta N2 - ಭಾರತದಲ್ಲಿ ರಾಮಾಯಣವನ್ನು; ಅಂತೆಯೇ ಮಹಾಭಾರತವನ್ನು ಬರೆದವರಿಗೆ ಲೆಕ್ಕವಿಲ್ಲ. ಇದು ಭಾರತದ ಎಲ್ಲ ಭಾಷೆಗಳಲ್ಲಿಯೂ ಕಂಡಿದೆ. ಅಂತೆಯೇ ಬಹುತೇಕ ಎಲ್ಲ ಶತಮಾನಗಳಲ್ಲಿ ಸಹ ಕಂಡಿದೆ. ಬರಹದಲ್ಲಿ ಗದ್ಯ, ಪದ್ಯ ಅಂತೆಯೇ ಮೌಖಿಕ ನೆಲೆಗಳಲ್ಲಿ ಸಹ ಇದೆ. ಆದರೂ ಈ ನಿಟ್ಟಿನ ಬರಹಗಳು ಇನ್ನೂ ಮೂಡುತ್ತಿವೆಯೆಂದರೆ ಬರಹಗಾರರ ದಾಹ ಇನ್ನೂ ತೀರಿಲ್ಲ ಎನ್ನಿಸುತ್ತದೆ. ಅಂತೆಯೇ ಈ ಕಥನದ ಸಾಧ್ಯತೆ ಹೊಸ ಹೊಸ ಕಾಲಗಳಿಗೆ ಹೊಸ ಹೊಸ ಬರಹಗಾರರಿಗೆ ವಿಸ್ತರಿಸಿಕೊಳ್ಳುತ್ತಲೇ ಇದೆ ಎನಿಸುತ್ತದೆ. ಇದು ಯಾವುದೇ ಜನ ಮತ್ತು ಸಂಸ್ಕೃತಿ ಮೂಲದ ಕಥನಗಳ ಅನನ್ಯತೆ ಎನ್ನಿಸುತ್ತದೆ. ಈ ನೆಲೆಯಲ್ಲಿ ಹೀಗೂ ಒಂದು ಕಥನವಾಗಿ ಉದಯಕುಮಾರ ಹಬ್ಬು ಅವರ `ತ್ಯಕ್ತ’ ಕಾದಂಬರಿಯಿದೆ. `ತ್ಯಕ್ತ’ -ಇದು ಮಹಾಭಾರತವನ್ನು ಮೂಲವಾಗಿರಿಸಿಕೊಂಡ ಕಥನವಾಗಿದೆ. ಇದು ಬಾಹ್ಯ ನೆಲೆಯಲ್ಲಿ ಕಾದಂಬರಿಯಾಗಿ ಕಂಡರೆ, ಆಂತರಿಕ ನೆಲೆಯಲ್ಲಿ ಆತ್ಮಕಥನವಾಗಿ ಕಾಣುತ್ತದೆ. ಆದರೆ ಇದನ್ನು ನೇರವಾಗಿ ಈ ಕೃತಿಯ ನಾಯಕನೇ ಬರೆದಿರುವುದರಿಂದ ಇದು ಕಾದಂಬರಿಯೇ ಸರಿ. ಪ್ರಸ್ತುತ ಕೃತಿಯ ಕೇಂದ್ರ ಪಾತ್ರ ದ್ರೋಣ ಆಗಿದ್ದಾನೆ. ಈತ ತನ್ನ ಆತ್ಮ ಕಥೆಯನ್ನು ನಿರೂಪಿಸುವ ಕ್ರಮದಲ್ಲಿ ಇಲ್ಲಿಯ ಮಹಾಭಾರತದ ಕಥೆಯನ್ನು ನಿರೂಪಿಸುತ್ತ ಹೋಗುತ್ತಾನೆ. ಇಲ್ಲಿ ತಾನೊಂದು ಪಾತ್ರವೂ ಆಗಿದ್ದಾನೆ. ಅಂತೆಯೇ ಒಟ್ಟೂ ಕಥೆಯ ನಿರೂಪಕನೂ ಆಗಿದ್ದಾನೆ. ಇದನ್ನು ಕೇಳುವ ಸಹೃದಯನು ಓದುಗನಾಗಿದ್ದಾನೆ. ಇನ್ನೂ ಸೂಕ್ಷ್ಮವಾಗಿ ಗಮನಿಸಿ ಹೇಳುವುದಾದರ, ಇಲ್ಲಿಯ ನಿರೂಪಕ `ಎಲೈ ಸಹೃದಯನೇ ಎಂದು ವೈಶಂಪಾಯನ ಮುನಿ ಕೇಳುವ ಜನುಮೇಜಯನೇ’ ಇಂಥ ಕಥನವು ಎಂದು ಸಂಭೋಧಿಸುವ ಹಾಗಿಲ್ಲ. ಹಾಗಾಗಿ ಇದು ಸ್ವಗತದ ಕ್ರಮದಲ್ಲಿದೆ ಎಂದು ಭಾವಿಸಬಹುದು. ಆದರೆ ಸ್ವಗತದ ನೆಲೆಯಲ್ಲಿ ಎಷ್ಟು ಮಾತಾಡಿಕೊಳ್ಳಲು ಸಾಧ್ಯ? ಇಷ್ಟು ದೀರ್ಘ ಕಥನವನ್ನು ಹೇಳಿಕೊಳ್ಳುವುದು ಸಹಜಸಾಧ್ಯಗೊಳ್ಳುವ ಸಂವಹನೆಯೇ? ಅಲ್ಲ, ಆದ್ದರಿಂದ ಇದು ಮೇಲ್ನೋಟಕ್ಕೆ ಸುದೀರ್ಘ ಎನ್ನಿಸಿದರೂ ವಾಸ್ತವದಲ್ಲಿ ಸಹೃದಯನನ್ನು ಸಂಬೋಧಿಸಿ ಬೆಳೆದ ಕಥನವೇ ಎನ್ನಿಸುತ್ತದೆ. ಇಂಥ ಕಥನವು ದ್ರೋಣನಿಂದ ಆರಂಭಗೊಳ್ಳುತ್ತದೆ. `ನಾನು ದ್ರೋಣ,’ ನಾನು ಇಂತಹ ವಂಶದಲ್ಲಿ ಹುಟ್ಟಿದವನು ಇತ್ಯಾದಿಯಾಗಿ ಸ್ವಪರಿಚಯದ ಮೂಲಕ ತೆರೆದುಕೊಳ್ಳುತ್ತದೆ. ಕ್ರಮೇಣ ಈ ಮೂಲಕ ಇಡೀ ಮಹಾಭಾರತವೇ ತೆರೆದುಕೊಳ್ಳುತ್ತದೆ. ಅಂತಿಮವಾಗಿ ಇದು ಕೊನೆಗೊಳ್ಳುವುದು ತಾನು ಕುರುಕ್ಷೇತ್ರದಲ್ಲಿ ಸಾವನ್ನಪ್ಪಿ, ಸ್ವರ್ಗವಾಸಿ ಆದಾಗ. ಇದು ಇಲ್ಲಿಯ ಕಥನ ಆದರೆ ಈ ಕಥನವನ್ನು ದ್ರೋಣನೇ ನಿರೂಪಕನಾಗಿ ಹೇಳುವುದು ಇಲ್ಲಿಯ ತಂತ್ರ. ಇದು ಕೃತಿಯ ಒಂದು ಮಖ್ಯ ನೆಲೆ. ಅಂತೆಯೇ ಇಲ್ಲಿ ಅನಾವರಣಗೊಳ್ಳುತ್ತಿರುವುದು ಕೇವಲ ಕಥೆ ಮಾತ್ರವಲ್ಲ; ವಿಮರ್ಶೆ ಕೂಡಾ ಇದೆ. ಆ ವಿಮರ್ಶೆಯನ್ನು ಸಹಿತ ಮಾಡುತ್ತಿರುವುದು ದ್ರೋಣನೇ ಆಗಿದ್ದಾನೆ. ಆ ವಿಮರ್ಶೆ ಮತ್ತು ಕಥನದಲ್ಲಿ ತಾನು ಪಾತ್ರವೂ ಆಗಿ ಬಿಂಬಿತನಾಗಿದ್ದಾನೆ ER -