ಸಾಧನೆಯ ಜೀವನ ನಡೆಸಿದ ಪ್ರೇಮಾ ಕಾರಂತರು ಅದರ ಹಿಂದಿದ್ದ ಕಷ್ಟಗಳು, ಅದು ತಂದಿತ್ತ ನೋವುಗಳ ಬಗ್ಗೆ ಬಹು ಧೈರ್ಯದಿಂದ ಮುಚ್ಚುಮರೆಯಿಲ್ಲದಂತೆ ನೇರ ಬರೆದಿದ್ದಾರೆ. ಅದೊಂದು ದಿನ ಪ್ರೇಮಾ ಕಾರಂತರ ಮನಸ್ಸಿನಲ್ಲಿ ಆಲೋಚನೆಗಳು, ನೋವು, ಖಿನ್ನತೆ ಪ್ರವಹಿಸುತ್ತಿರುವಂತೆಯೇ ಪ್ರಮುಖ ಸಾಹಿತಿಯೊಬ್ಬರು "ಏನು ಗಟ್ಟಿ ಹೆಂಗಸರೀ ನೀವು" ಎಂದೆಲ್ಲ ಹೊಗಳಿದ್ದರ ಪ್ರಸ್ತಾಪವಿದೆ. ಆಗ ಅವರನ್ನು ಹೊಗಳಿದ ಆ ಸಾಹಿತಿಯೂ ಅವರಿಗೆ "stupid man" ಅನ್ನಿಸುವುದರಲ್ಲಿ ಬದುಕಿನ ವಾಸ್ತವದ ಅರಿವಿನ ಚಹರೆಯಿದೆ. ಅವರು ಅನುಭವಿಸಿದ ನೋವುಗಳ ಹಿಂದೆ ಕಷ್ಟಗಳ ಸರಮಾಲೆಯಿದ್ದರೂ ಅದನ್ನು ಹೆಚ್ಚು ಎಳೆಯದೆ ಧೈರ್ಯದಿಂದ ಮುನ್ನುಗ್ಗಿದುದರ ಕುರಿತು ಹೆಚ್ಚು ಒತ್ತು ಕೊಟ್ಟು ಬರೆದಿದ್ದಾರೆ. ಪುಸ್ತಕ ಓದುವಾಗ ಈ ವಿಷಯ ನನಗೆ ಬಹಳ ಇಷ್ಟವಾಯಿತು.
ಬಿ ವಿ ಕಾರಂತರ ಸಾಧನೆಯ ಜೀವನದಲ್ಲಿ ಪ್ರೇಮಾ ಕಾರಂತರು ವಹಿಸಿದ ಪಾತ್ರ ಎಷ್ಟು ದೊಡ್ಡದು ಎಂಬುದನ್ನು ಪ್ರೇಮಾ ಕಾರಂತರು ಹೇಳಿಕೊಳ್ಳುವ ಗೋಜಿಗೆ ಹೋಗದಿದ್ದರೂ ಅದರ ಅರಿವು ಓದುಗರಿಗಾಗುತ್ತದೆ. ಪುಸ್ತಕವೊಂದು ಪಟ್ಟ ಪಾಡಿನ ವ್ಯಾಖ್ಯಾನವಷ್ಟೇ ಆಗದೆ ಕಷ್ಟಗಳನ್ನೆದುರಿಸುವ, ಧೈರ್ಯ ತುಂಬುವ ಅಪೂರ್ವ ಅನುಭವವಾಗುವುದು ಈ ಕೃತಿಯ ವೈಶಿಷ್ಟ್ಯತೆ.