ಕವಲುಕೊಪ್ಪದ ಸುಬ್ರಾಯ ಹೆಗಡೆ ಈ ಕಾದಂಬರಿಯ ಕೇಂದ್ರಬಿಂದು. ಪ್ರಾರಂಭದಲ್ಲಿ ಸುಸ್ಥಿತಿಯಲ್ಲಿ ಇದ್ದ ಅವನ ಕುಟುಂಬವು ದಾರಿದ್ರ್ಯಕ್ಕೆ ಜಾರುವ ಸನ್ನಿವೇಶಗಳ ಮೂಲಕ ಕಾದಂಬರಿ ಪ್ರಾರಂಭವಾಗುತ್ತದೆ. ಇಂದಿನಂತೆಯೇ ಬಿದ್ದವನ ಮೇಲೊಂದು ಗುದ್ದು ಎಂಬಂತೆ ಒಂದಷ್ಟು ಅವಮಾನ,ಅಪಮಾನಗಳನ್ನು ಅನುಭವಿಸುತ್ತಾನೆ. ಆದರೆ ಎಲ್ಲಿಯೂ ಸ್ಥಿತಪ್ರಜ್ಞತೆಯನ್ನು ಕಳೆದುಕೊಳ್ಳದೆ ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಜೀವನವನ್ನು ಸಾಗಿಸುತ್ತಾನೆ. ಬೇರೆ ದಾರಿಯೇ ಕಾಣದಾದಾಗ ದೇವರ ಕೃಪೆಯಿಂದ ಅವನ ಗ್ರಹಗತಿ ಸುಧಾರಿಸಿ ನಿಧಾನಕ್ಕೆ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಾನೆ. ಹೀಗೆ ಕಳೆದು ಹೋದ ಸ್ಥಿತಿವಂತಿಕೆ,ಗೌರವಾದರಗಳು ಮತ್ತೆ ಮರಳುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವೊಂದು ಜರುಗಿ ಹೋಗುತ್ತದೆ. ಹೀಗೆಲ್ಲಾ ಏರಿಳಿತ ಕಂಡ ಅವನ ಮತ್ತು ಅವನ ಸುತ್ತಲಿನ ಜನರ ಬದುಕು ಬವಣೆಗಳು, ಅವನು ತೆಗೆದುಕೊಂಡ ಚಾಣಾಕ್ಷತನದಿಂದ ಕೂಡಿದ ದೃಢ ನಿರ್ಧಾರಗಳು, ಅಷ್ಟೆಲ್ಲಾ ಗಟ್ಟಿ ವ್ಯಕ್ತಿತ್ವದ ಸುಬ್ರಾಯ ಹೆಗಡೆ ಕಾಲಚಕ್ರದಲ್ಲಿ ಏನಾದ ಎಂಬುದೇ ಒಟ್ಟು ಕಾದಂಬರಿಯ ಸಾರಾಂಶ.