ಕವಿ- ನಾಟಕಕಾರ ಚಂದ್ರಶೇಖರ ಕಂಬಾರ ಅವರ ಮಹತ್ವದ ಕಾದಂಬರಿಯಿದು. ಕಂಬಾರರ ಚಕೋರಿ ಮಹಾಕಾವ್ಯದ ಮುಂದುವರೆದ ಭಾಗ ಎಂದು ಕೂಡ ಓದಬಹುದಾದ ಈ ಕಾದಂಬರಿಯು ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ. ಜಾಗತೀಕರಣದ ಕಾಲಘಟ್ಟದಲ್ಲಿ ರಚಿತವಾದ ಈ ಕಾದಂಬರಿಯು ಪಂಡಿತ-ಪಾಮರರಿಬ್ಬರಿಗೂ ಪ್ರಿಯವಾಗಿದೆ. ಈ ಕಾದಂಬರಿಗೆ ಟ್ಯಾಗೋರ್ ಸಾಹಿತ್ಯ ಪ್ರಶಸ್ತಿ ದೊರೆತಿದೆ.
ಕವಿ ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ಅವರು ಶಿಖರಸೂರ್ಯದ ಬಗ್ಗೆ ’ಇಂದಿನ ಗೋಳೀಕೃತ (ಗ್ಲೋಬಲೈಸ್) ಜಗತ್ತಿನ ಒಣ ಗತ್ತುಗಳನ್ನು, ತಂತ್ರಜ್ಞಾನದ ಠೇಂಕಾರಗಳನ್ನು, ಈ ಮೃತ್ಯುವಿನ ಸ್ಥಿತಿಯಲ್ಲಡಗಿರುವ ಮರುಹುಟ್ಟಿನ ಅಸೀಮ ಸಾಧ್ಯತೆಗಳನ್ನು ಇಷ್ಟು ಸಮಗ್ರವಾಗಿ ಹಿಡಿದಿಡುವ ಕೃತಿಗಳು ನನಗೆ ಗೊತ್ತಿದ್ದ ಮಟ್ಟಿಗೆ ಇವತ್ತಿನ ಸಾಹಿತ್ಯದಲ್ಲಿ ವಿರಳ’ ಎಂದು ಅಭಿಪ್ರಾಯ ಪಟ್ಟರೆ, ಲೇಖಕ-ಚಿತ್ರ ನಿರ್ದೇಶಕ ಎನ್.ಎಸ್. ಶಂಕರ್ ಅವರು ’ ಕನ್ನಡದಲ್ಲಿ 'ಮಲೆಗಳಲ್ಲಿ ಮದುಮಗಳು' ಆದಮೇಲೆ ಮನಸ್ಸಿನಲ್ಲಿ ಊರಿ ನಿಲ್ಲುವ ಕೃತಿ ಶಿಖರಸೂರ್ಯವೇ. ಹಾಗೆ ಇದು ಕನ್ನಡವಷ್ಟೇ ಅಲ್ಲ, ಭಾರತೀಯ ಕಾದಂಬರಿ ಪರಂಪರೆ ಯಲ್ಲೇ ಗಣ್ಯಸ್ಥಾನ ಪಡೆದು ನಿಲ್ಲುವ ಕೃತಿ ’ಎಂದು ಮೆಚ್ಚಿಗೆ ಸೂಚಿಸಿದ್ದಾರೆ.
ವಿಮರ್ಶಕ ಮಾಧವ ಕುಲಕರ್ಣಿ ಅವರು ’ಸಾಹಿತ್ಯದಲ್ಲಿ ಒಮ್ಮೊಮ್ಮೆ ಹೊಸ ದಾರಿಯನ್ನು ತೆರೆದು ತೋರುವ ಕೃತಿಗಳು ಸಂಭವಿಸುತ್ತವೆ. ಅಂಥ ಒಂದು ಘಟನೆ “ಶಿಖರಸೂರ್ಯ' ಕಾದಂಬರಿ, ದಾರ್ಶನಿಕ ನಿಲುವೆಂದರೇನೆಂಬುದನ್ನು ಅರಿಯಲು ಉತ್ಸುಕರಾಗಿರುವವರು ಈ ಕಾದಂಬರಿಯನ್ನು ಒಮ್ಮೆ ಓದಬೇಕು’ ಎಂದು ಅಭಿಪ್ರಾಯಪಟ್ಟರೆ ಲೇಖಕ ಮಾಧವ ಪೆರಾಜೆ ಅವರು ’ಭುವನದ ಭಾಗ್ಯವೆನ್ನುವಂತೆ 'ಶಿಖರಸೂರ್ಯ' ಈಗ ಉದಯವಾಗಿದೆ. ಕುಮಾರವ್ಯಾಸ ತಾನು 'ಕಾವ್ಯಕ್ಕೆ ಗುರುವೆನಲು' ಕರ್ಣಾಟ ಭಾರತ ಕಥಾಮಂಜರಿಯನ್ನು ರಚಿಸಿದಾಗ ಹೇಳುತ್ತಾನೆ. ಚಂದ್ರಶೇಖರ ಕಂಬಾರರು ಹಾಗೆ ಹೇಳಿಕೊಂಡಿಲ್ಲ. ಆದುದರಿಂದಲೇ ಅದು ಕಾವ್ಯಕ್ಕೆ ಗುರುವೆನೆಲು ರಚಿಸಿದ ಕಾವ್ಯ/ಕಾದಂಬರಿ’ ಎಂದು ಹಾಡಿ ಹೊಗಳಿದ್ದಾರೆ.