'ಒಂದಾನೊಂದು ಕಾಲದಲ್ಲಿ' ಲೇಖಕ ನಾಗ ಐತಾಳ ಅವರ ಕಟ್ಟು ಕತೆಗಳ ಸಂಕಲನ. “ಕಥೆ ಕೇಳುವುದು ಯಾರಿಗೆ ಬೇಡ? ಹಾಗೇ ಕಥೆ ಹೇಳುವುದು ಕೂಡ ಹುಟ್ಟಿನೊಂದಿಗೆ ಬೆಳೆದು ಬಂದ ಕಥೆ ಇಂದಿಗೂ ಬೆಳೆಯುತ್ತಲೇ ಇದೆ. ನಾವೆಲ್ಲರೂ ಕಥೆಗಳನ್ನು ಕೇಳುತ್ತಾ, ನೋಡುತ್ತಾ, ಕಥೆಗಳಾಗುತ್ತಾ ಬೆಳೆದವರ ಕಥೆಗಳಿಲ್ಲದ ಜಗತ್ತನ್ನೊಮ್ಮೆ ನೆನಪಿಸಿಕೊಳ್ಳುವುದು ಅಸಾಧ್ಯ. ಈ ಹೊತ್ತಿಗೂ ನಮ್ಮ ಹಳ್ಳಿಗಳಲ್ಲಿ ಅದೆಷ್ಟೋ ಕಥೆಗಳು ಜೀವಂತವಾಗಿವೆ. ಕೆಲ ಮಣ್ಣಲ್ಲಿ ಸೇರಿಹೋಗಿವೆ. ನಾಗ ಐತಾಳರು ಅಪರೂಪದ ಕಥೆಗಳನ್ನು ಇಲ್ಲಿ ಸಂಗ್ರಹಿಸಿಕೊಟ್ಟಿದ್ದು, ಕೇವಲ ನಮ್ಮಲ್ಲಿ ಕುತೂಹಲ ಹುಟ್ಟಿಸುವುದಷ್ಟೇ ಅಲ್ಲ, ಸಂಸ್ಕೃತಿಯ ರೂಪಕಗಳಾಗಿಯೂ ಮಹತ್ವದ್ದಾಗಿವೆ. ಆಶ್ಚರ್ಯದ ಸಂಗತಿಯೆಂದರೆ, ಎಷ್ಟೋ ಕಥೆಗಳಿಗೆ ಬೇರೆ ಬೇರೆ ನೆಲೆಗಳ ರೂಪಾಂತರಗಳಿವೆ. ಅವೆಲ್ಲವೂ ನಮ್ಮ ಸಮಾಜದ ಮನಸ್ಸಿನ ಪ್ರತಿಬಿಂಬಗಳಂತೆ ಕಾಣುತ್ತವೆ. ಈ ಕಥೆಗಳು ನಮ್ಮ ಬದುಕನ್ನು ಒಳಗೊಂಡು ಆಚೆಗೆ ಚಲಿಸುವಂತೆ ಮಾಡುತ್ತವೆ. ಅಲ್ಲಿ ಪ್ರಾಣಿಗಳು, ಬ್ರಹ್ಮರಾಕ್ಷಸ, ಮಾಟಗಾತಿ, ಹಾವು, ಕೋಗಿಲೆ, ಮರ, ಕಪ್ಪೆ ಹೀಗೆ ಎಲ್ಲವೂ ಇದೆ. ಮತ್ತೆ ಕಥೆಗಳು ನಮ್ಮೊಳಗೆ ಪ್ರಯಾಣ ಬೆಳೆಸುತ್ತವೆ.