‘ಮೀನ್ ಪಳ್ದಿ’ ಕೃತಿಯು ಆರ್.ವಿ.ಭಂಡಾರಿ ಅವರ ಕತಾಸಂಕಲನವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಪ್ರತಿಭಟನಾ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಆರ್. ವಿ. ಭಂಡಾರಿಯವರ ಹದಿನೇಳು ಕಥೆಗಳ ಸಂಕಲನ `ಮೀನ್ ಪಳ್ದಿ‘. ಜಾತಿ ಸಂಘರ್ಷಗಳು, ಹಸಿವೆ, ಅವನ್ನು ಮೀರಲು ಹವಣಿಸುವ ಆದರ್ಶ, ಬದಲಾವಣೆಗಳು ಹಾಕುವ ಬೇಲಿ ಮೊದಲಾದವನ್ನು ಅವರ ಕಥೆಗಳು ಒಳಗೊಳ್ಳುತ್ತಾ ಹೋಗುತ್ತವೆ. `ಇತಿಹಾಸವೂ ಮಾತಾಡುವುದಿಲ್ಲ‘ ಹಿಂದು-ಮುಸ್ಲಿಂ ಸಾಮರಸ್ಯ ಕುರಿತ ಜಿಜ್ಞಾಸೆಯನ್ನು ವಸ್ತುವಾಗಿಸಿಕೊಂಡ ವಿಭಿನ್ನ ಮಾದರಿಯ ಕಥೆ. `ಅಂಗಡಿ ಪೂಜೆ‘, `ಮೀನ ಪಳ್ದಿ‘ ಕಥೆಗಳು ಹಸಿವೆಯ ವಿವಿಧ ಮುಖಗಳನ್ನು ಬಿಚ್ಚಿಡುತ್ತವೆ. ಕಥನ ನಿರೂಪಣೆಯ ಸೂಕ್ಷ್ಮ ಧಾಟಿಯಲ್ಲೇ ಭಂಡಾರಿ ರೂಪಕಗಳನ್ನು ಕಟ್ಟುತ್ತಾರೆ. ಕೆಲವೊಮ್ಮೆ ಇಡೀ ಕಥೆಯ ಆಯ್ಕೆಯೇ ರೂಪಕವಾಗಿ ಪರಿಣಮಿಸುವುದುಂಟು. ಸಂಭಾಷಣೆ ಆಧಾರಿತ ನಿರೂಪಣೆ ಅವರ ಆಯ್ಕೆಯಾಗಿದೆ. ಏನನ್ನೋ ಚಿಮ್ಮಿಸಿ, ಉತ್ಸಾಹ ತುಂಬಿ ಕೆಲವು ಕಥೆಗಳು ದಿಢೀರನೆ ಅಂತ್ಯವಾಗಿ ಬಿಡುತ್ತವೆ.