ಲಂಕೇಶ್ ಮೋಹಕ ರೂಪಕಗಳ ನಡುವೆ- ಕನ್ನಡ ಪತ್ರಿಕೋಧ್ಯಮ, ಸಾಹಿತ್ಯ ಕ್ಷೇತ್ರ, ರಂಗಭೂಮಿ, ರಾಜಕೀಯ ಪ್ರತಿಯೊಂದು ಕ್ಷೇತ್ರದಲ್ಲೂ ಲಂಕೇಶ್ ಅಸ್ಮಿತೆಯೊಂದಿದ್ದೇ ಇದೆ. ಲಂಕೇಶ್ ಓದುಗರು, ಒಡನಾಡಿಗಳಿಗೂ ಪ್ರತಿ ವಿಚಾರದಲ್ಲೂ ಲಂಕೇಶ್ ಇಂದಿಗೂ ಪ್ರಭಾವಿಸುತ್ತಾರೆ. ಪ್ರಸ್ತುತ ಕೃತಿ ಲಂಕೇಶರ ವಿದ್ಯಾರ್ಥಿ, ಅನುಗಾಲದ ಗೆಳೆಯ ಶೂದ್ರ ಶ್ರೀನಿವಾಸ್ ಅವರು ಲಂಕೇಶರನ್ನು ಅರ್ಥೈಸಿಕೊಂಡ ಬಗೆಯ ವಿವರಣೆ ಎನ್ನಬಹುದು. ಲಂಕೇಶ್ ಅವರ ಒಡನಾಟದಲ್ಲಿ, ಸಾಂಗತ್ಯದಲ್ಲಿ, ಪರಿಧಿಯಲ್ಲಿ ಬಂದುಹೋದ ಕರ್ನಾಟಕ ಸಾಂಸ್ಕೃತಿಕ-ರಾಜಕೀಯ ಲೋಕದ ಗಣ್ಯರುಗಳು ಬಂದು ಹೋಗಿದ್ದಾರೆ. ಲಂಕೇಶರ ವ್ಯಕ್ತಿತ್ವವನ್ನು ಇಡಿಯಾಗಿ ಹಿಡಿಯ ಹೊರಟ ಶೂದ್ರ ಶ್ರೀನಿವಾಸರು ಇಂಥ ಬಹುತೇಕರ ವ್ಯಕ್ತಿಚಿತ್ರಣವನ್ನೂ ಕಟ್ಟಿಕೊಡುತ್ತಾರೆ. ಅದೇ ಕಾಲದಲ್ಲಿ ಆ ವ್ಯಕ್ತಿಗಳ ಕಣ್ಣುಗಳಲ್ಲಿ ಲಂಕೇಶ್ ಚಿತ್ರಿತವಾದ ರೀತಿಯೂ ಇಲ್ಲಿ ಅನಾವರಣಗೊಂಡಿದ್ದೆ. ಇದು 'ಲಂಕೇಶ್; ಮೋಹಕ ರೂಪಗಳ ನಡುವೆ' ಕೃತಿಯ ಬಹುಮುಖ್ಯ ವೈಶಿಷ್ಟ್ಯ.