1991ರಲ್ಲಿ ಪ್ರಕಟವಾದ ’ಕಿರಗೂರಿನ ಗಯ್ಯಾಳಿಗಳು’ ಸಂಕಲನದಲ್ಲಿ 'ಕೃಷ್ಟೇಗೌಡನ ಆನೆ', 'ಮಾಯಾಮೃಗ', ’ರಹಸ್ಯ ವಿಶ್ವ' ಎಂಬ ನಾಲ್ಕು ಕತೆಗಳಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಶ್ರೇಷ್ಠ ಸೃಜನಶೀಲ ಕೃತಿ ಪ್ರಶಸ್ತಿ (1992) ಪಡೆದಿದೆ. ಮೊದಲನೆ ಕತೆಯಾದ 'ಕಿರಗೂರಿನ ಗಯ್ಯಾಳಿಗಳು' ಸ್ತ್ರೀವಾದಿಗಳಿಂದ ತುಂಬ ಪ್ರಶಂಸೆಗೆ ಪಾತ್ರವಾಗಿದೆ. ಹಿಂದಿ, ಇಂಗ್ಲಿಷ್, ಮಲಯಾಳಂ, ಮರಾಠಿ, ಕೊಡವ ಭಾಷೆಗಳಿಗೆ ಅನುವಾದವಾಗಿದೆ. ಎ.ಎನ್.ರಾವ್ ಜಾಧವ್ರಿಂದ ನಾಟಕವಾಗಿ ಅನೇಕ ಪ್ರದರ್ಶನ ಕಂಡಿದೆ. ಅದರ ರಂಗಕೃತಿಯೂ ಪುಸ್ತಕವಾಗಿ ಪ್ರಕಟವಾಗಿದೆ (1999), ಸುಮನ ಕಿತ್ತೂರು ಅವರ ನಿರ್ದೇಶನದಲ್ಲಿ ಸಿನೆಮಾ ಕೂಡ ಆಗಿದೆ. ಕಥೆಯ ಪ್ರಾರಂಭವೇ ಹೆಂಗಸರ ನೆಪದಿಂದ ಕಿರಗೂರು ಪ್ರಸಿದ್ದವಾಗಿರುವುದನ್ನು ಹೇಳುತ್ತದೆ. ಗಂಡಸರು ಎಷ್ಟು ಸೌಮ್ಯರೋ ಹೆಂಗಸರು ಅಷ್ಟೇ ಬಜಾರಿಯರು ಎಂಬುದು ಕಥೆಯ ಉದ್ದಕ್ಕೂ ಸ್ಥಿರವಾಗುತ್ತಾ ಹೋಗುವುದೇ ಇದರ ವೈಶಿಷ್ಟ್ಯ.