ದಲಿತ ಸಾಹಿತ್ಯ ಮತ್ತು ಅದರ ಉತ್ತರೋತ್ತರ ಚರ್ಚೆಗಳು ಸಮಕಾಲೀನ ಸಾಹಿತ್ಯ ಮತ್ತು ಸಂಸ್ಕೃತಿ ಸಂದರ್ಭಗಳಲ್ಲಿ ನಡೆಯುತ್ತಿರುವಂತದ್ದು. ಈ ದೃಷ್ಟಿಯಿಂದ ದಲಿತ ಸ್ತ್ರಿ ಬರಹಗಾರರಾದ ಭಾಮಾ ಅವರ ಸಾಹಿತ್ಯ ಕೃಷಿ ಈ ಭಾಮಾ ದಲಿತ ಪ್ರಜ್ಞೆ ಕೃತಿಯಲ್ಲಿ ಸ್ಪಷ್ಟವಾಗುತ್ತದೆ. ಇದರ ಮೂಲ ಬರಹಗಾರರಾದ ಆರ್ . ಕೆ ಧವನ್ ಮತ್ತು ಸುನಿತಾ ಪುರಿಯವರ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿದವರು ವಿಮರ್ಶಕ ಡಾ. ಎಚ್.ಎಸ್. ನಾಗಭೂಷಣ. ಭಾಮಾ ಅವರು ದಲಿತ ಶೋಷಣೆಗಳನ್ನು ತಮ್ಮ ಸಾಹಿತ್ಯದಲ್ಲಿ ಕೇಂದ್ರಿಕರಿಸುತ್ತಾರೆ. ಶೋಷಣೆಯೇ ಪ್ರಧಾನವಾದ ಸಮುದಾಯಗಳಲ್ಲಿ ಶೋಷಣೆ ಎನ್ನುವುದು ಸಾಮಾನ್ಯ ಸಂಗತಿಯಾಗಿದೆ. ಈ ಶೋಷಣೆಯ ಸ್ವರೂಪವು ದಲಿತ ಎನ್ನುವ ಹಿನ್ನೆಲೆಯಲ್ಲಿ ನೋಡುವಾಗ ಭಾರತೀಯ ಸಮಾಜದಲ್ಲಿ ಇರುವ ಜಾತಿ ಪದ್ದತಿ, ಹೊರದೂಡುವಿಕೆಯ ಮನಃಸ್ಥಿತಿ ಇತ್ಯಾದಿಗಳಲ್ಲಿ ಕಾಣಬಹುದು. ಭಾಮಾ ಅವರ ಸಾಹಿತ್ಯದ ಹಿನ್ನಲೆಯಲ್ಲಿ ದಲಿತ ಸಂಕಥನಗಳ ವೈವಿಧ್ಯಮಯವಾದ ಅಂಶಗಳನ್ನು ಚರ್ಚಿಸಲಾಗಿದೆ. “ನಮಗೇಕೆ ಹುಡುಗರ ರೀತಿ ಇರಲು ಸಾಧ್ಯವಿಲ್ಲ? ನಾವು ಗಟ್ಟಿಯಾಗಿ ಮಾತಾಡುವಂತೆಯೂ ಇಲ್ಲ. ಮಲಗುವಾಗಲೂ ಅಂಗಾತ ಮಲಗುವಂತಿಲ್ಲ ಹಸಿವಿನಿಂದ ಸಾಯುತ್ತಿದ್ದರೂ ನಾವು ಮೊದಲು ಉಣ್ಣುವಂತಿಲ್ಲ. ಗಂಡಸರೆಲ್ಲಾ ಉಂಡ ಮೇಲೆ ನಾವು ಉಣ್ಣಬೇಕು. ಏನು ಪಾತಿ, ನಾವೂ ಮನುಷ್ಯರಲ್ಲವೆ?" ಪ್ರತಿ ರಾತ್ರಿ ತಮ್ಮ ಗಂಡಂದಿರಿಗೆ ಸುಖ ನೀಡಬೇಕು. ಅನಾರೋಗ್ಯದಿಂದ ದೇಹ ದಣಿದಿದ್ದರೂ ತನ್ನ ತೃಪ್ತಿಯ ಬಗ್ಗೆ ಮಾತ್ರ ಕಾಳಜಿ. ಇದೆಲ್ಲದರಿಂದಾಗಿ ಮಹಿಳೆಯರಿಗೆ ಜೀವನದ ಬಗ್ಗೆ ಅಸಹ್ಯ ಹಾಗು ಬೇಸರ. ಇದನ್ನೆಲ್ಲಾ ಸಹಿಸಲು ಸಾಧ್ಯವಾಗದೆ ಮಾನಸಿಕ ಅಸ್ಥಿರತೆ, ಮಾನಸಿಕವಾಗಿ ತೊಂದರೆಗೊಳಗಾದ ಮಹಿಳೆಯರು ಮೈಮೇಲೆ ದೆವ್ವ ಬಂದಂತೆ ವರ್ತಿಸುತ್ತಾರೆ” “ನನ್ನ ತಲೆಯ ತುಂಬಾ ನೂರಾರು ಕಥೆಗಳಿವೆ. ಇದು ಕೇವಲ ದಲಿತ ಮಹಿಳೆಯರ ಕಣ್ಣಿರಿನ ಕಥೆಯಲ್ಲ. ಇದು ಆಕೆಯ ಹೋರಾಟದ ಕಥೆ ಕೂಡ. ಈ ಹೋರಾಟಗಳು ತನ್ನ ಜೀವನವನ್ನು ಹಾಳು ಮಾಡಲು ಅವಕಾಶ ನೀಡದೆ, ಜೀವನವನ್ನು ಧೈರ್ಯದಿಂದ ಹಾಗು ಸಂತೋಷದಿಂದ ಬದುಕಲು ಕಲಿಸಿದೆ. ಈ ಕಥೆಗಳನ್ನು ನಾನು ಕೂಗಿ ಎಲ್ಲರಿಗೂ ಹೇಳಬೇಕು". “ಹೊಲ ಗದ್ದೆಗಳಲ್ಲಿ ಪುರುಷರ ಹಿಂಸೆಯಿಂದ ಪಾರಾಗಬೇಕು. ಚರ್ಚ್ನಲ್ಲಿ ದೇವರು, ಸ್ವರ್ಗ, ನರಕದ ಕಥೆಗಳನ್ನು ಹೇಳಿ ಹೆದರಿಸುವ ಪಾದ್ರಿಗಳ ಬೂಟನ್ನು ನೆಕ್ಕಬೇಕು. ಮನೆಗೆ ಹೋಗಿ ಒಂದಿಷ್ಟು ಗಂಜಿ ಕುಡಿದು ಮಲಗೋಣ ಎಂದರೆ ಗಂಡಂದಿರ ಕಾಟ ಸಹಿಸಿಕೊಳ್ಳಬೇಕು”.