ದೈವಾರಾಧನೆಗೆ ಸಂಬಂಧಿಸಿದ ಡಾ.ಗಣೇಶ ಅಮೀನ್ ಸಂಕಮಾರ್ ಅವರ ಅಧ್ಯಯನ ಗ್ರಂಥ ‘ಸಾವಿರದ ಸತ್ಯಗಳು’ ದೈವ ಕಟ್ಟುವವರಿಗೆ ಮತ್ತು ಆಧುನಿಕ ರಂಗಭೂಮಿ ಬಳಸುವವರಿಗೆ ಅತ್ಯಂತ ಉಪಯುಕ್ತ ಸಮಾಲೋಚನಾ ಗ್ರಂಥವಾಗಿದೆ. ತುಳುನಾಡಿನ ಸುಮಾರು 35 ದೈವಗಳ ನುಡಿಗಳನ್ನು ತಮ್ಮ ಸಾವಿರದ ಸತ್ಯಗಳು ಕೃತಿಯ ಮೂಲಕ ಸಂಗ್ರಹಿಸಿದ್ದಾರೆ ಆರಾಧನೆ ನುಡಿಗಟ್ಟು, ಪಾರಿ, ಮಧು, ಮದಿಪು, ಬಿರೊ ಹೇಗಿವೆ ಎಂಬುದನ್ನು ಮುಂದಿನ ತಲೆಮಾರಿಗೆ ತಿಳಿಸುವ ಪ್ರಯತ್ನ ಶ್ಲಾಘನೀಯ. ಹೊಸ ಕಾಲದಲ್ಲಿ ಎಲ್ಲವು ಹೊಸ ರೂಪ ಪಡೆಯುತ್ತಿದೆ. ಜನಪದವು ವೈದಿಕ ರೂಪಾಂತರವಾಗುತ್ತಿರುವ ಸಂದರ್ಭ ತುಳುವಿನ ಮಣ್ಣಿನ ವಾಸನೆಯ ಶ್ರೀಮಂತಿಕೆಯನ್ನು, ಅಪರೂಪದ ತುಳು ಪಾರಿಭಾಷಿಕ ಪದಬಳಕೆಯನ್ನು ತಿಳಿಸುವ ಅಪೂರ್ವ ಗ್ರಂಥ ಇದಾಗಿದೆ.