ಲೇಖಕರಾದ ಅನುಬೆಳ್ಳೆ (ರಾಘವೇಂದ್ರ ಬಿ. ರಾವ್) ಅವರ ಕಾದಂಬರಿ ’ಕುಡ್ಪಲ್ ಭೂತ’.
ಈ ಕಾದಂಬರಿಯು ಪತ್ತೇದಾರಿ ಕಾದಂಬರಿಯ ಶೈಲಿಯಲ್ಲಿ ಸಾಗುತ್ತಾ ವರದಿಯನ್ನು ಹುಟ್ಟುಹಾಕುವ ರೀತಿಯಲ್ಲಿ ಇತಿಹಾಸವನ್ನು ದಾಖಲಿಸುತ್ತಾ ಹೋಗುತ್ತದೆ.
ಬ್ರಿಟಿಷ್ ಕಾಲದಲ್ಲಿದ್ದ ಕೊತ್ತಣ್ಣ ಎಂಬುವವನ ಅಂಗಡಿಯನ್ನು ತೆರೆಯುವ ನೆನಪಿನಲ್ಲಿ ಆ ಊರಿನ ಕೊತ್ತಣ್ಣನ ಅಂಗಡಿ ಕೊನೆಗೆ ಕೊತ್ತಂಗಡಿ ಆಯಿತೆಂಬುದರ ಪ್ರತೀತಿಯನ್ನು ಹೇಳುತ್ತಾ ಸಾಗುವ ಕಾದಂಬರಿಯ ಕಥಾ ವಸ್ತು ಆರಂಭವಾಗುತ್ತದೆ. ’ಕುಡ್ಪಲ್ ಭೂತ’ವನ್ನು ಸೃಷ್ಟಿಸುತ್ತಾ, ಹುಡುಕುತ್ತಾ, ಕೊತ್ತಂಗಡಿಯಲ್ಲಿ ಎಲ್ಲರೂ ಭೂತಗಳೇ’ ಎಂಬ ನಿರ್ಣಯಕ್ಕೆ ತಂದೊಡ್ಡುವ ಕಾದಂಬರಿ ಒಂದು ರೀತಿಯ ಸಾಮಾಜಿಕ ವ್ಯವಸ್ಥೆಯನ್ನು , ಮತ್ತು ರಾಜಕೀಯ ವ್ಯವಸ್ಥೆಯನ್ನು , ಸಮಕಾಲೀನ ಸಾಮಾಜಿಕ ಪರಿಸ್ಥಿಯನ್ನೂ ಸೂಕ್ಷ್ಮವಾಗಿ ತಿಳಿಸುತ್ತದೆ.
ಒಂದು ಹಳ್ಳಿಯ ಜೀವನ ಚಿತ್ರಣದ ಜೊತೆಗೆ ಅಲ್ಲಿಯ ಜನರ ಮುಗ್ದತೆ, ಸಾಂಸ್ಕೃತಿಕ ಚೆಲುವು , ನಡೆ-ನುಡಿಗಳನ್ನು ದಾಖಲಿಸುವ ಪ್ರಯತ್ನವನ್ನು ಈ ಕಾದಂಬರಿಯಲ್ಲಿ ಮಾಡಲಾಗಿದೆ. ಬಹಳಷ್ಟು ಆಪ್ತವೆನಿಸುವ ಸನ್ನಿವೇಶಗಳು, ನಂಬಿಕೆಗಳು, ಶ್ರದ್ಧೆಗಳು ಪಾತ್ರಗಳ ಮೂಲಕ ಕಂಡುಕೊಳ್ಳುವ ರೀತಿಯಲ್ಲಿ ಮುಂದುವರೆಯುತ್ತದೆ. ಕುತೂಹಲವೊಂದನ್ನೇ ಪ್ರಧಾನವಾಗಿರಿಸದೇ, ಹಳ್ಳಿ ಬದುಕಿನ ಬವಣೆಯನ್ನೂ ಕಾದಂಬರಿ ಬಿತ್ತರಿಸುತ್ತದೆ.