PURUSHOTTAMA BILIMALE ಪುರುಷೋತ್ತಮ ಬಿಳಿಮಲೆ

Bandaya dalita chaluvali mattu sahitya ಬಂಡಾಯ ದಲಿತ ಚಳುವಳಿ ಮತ್ತು ಸಾಹಿತ್ಯ - Bengaluru Abhinava Prakashana 2017 - vi,188

ಬಂಡಾಯ ದಲಿತ- ಚಳುವಳಿ ಮತ್ತು ಸಾಹಿತ್ಯ' ಲೇಖಕ ಪುರುಷೋತ್ತಮ ಬಿಳಿಮಲೆ ಅವರ ಕೃತಿ. ಈ ಕೃತಿಯ ಕುರಿತು ಬರೆಯುತ್ತಾ 1990ರಲ್ಲಿ ನಾನಿದನ್ನು ಬರೆದಾಗ ಇದ್ದ ಸ್ಥಿತಿಗೂ ಈಗಣ ಸ್ಥಿತಿಗೂ ತುಂಬ ವ್ಯತ್ಯಾಸವಾಗಿದೆ ಎನ್ನುತ್ತಾರೆ ಪುರುಷೋತ್ತಮ ಬಿಳಿಮಲೆ. ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಕುರಿತಾದ ನಮ್ಮ ಚಿಂತನೆಗಳು ಸಾಕಷ್ಟು ಬದಲಾಗಿವೆ ಮತ್ತು ವಿಸ್ತಾರವಾಗಿವೆ. ಆದರೆ ಸಮಾಜ ಯಾಕೋ ಸಂಕುಚಿತವಾಗುತ್ತಾ ಹೋದಂತಿದೆ. ಸಡಿಲಗೊಳ್ಳಬೇಕಾಗಿದ್ದ ಜಾತಿಯ ನೆಲೆಗಳು ಭದ್ರವಾಗುತ್ತಿವೆ, ಬಂಡವಾಳ ಶಾಹಿಗಳು ಶೋಷಣೆಯ ಹೊಸ ತಂತ್ರಗಳನ್ನು ಕಂಡುಕೊಂಡಿವೆ. ದಲಿತರ ಮೇಲಿನ ಹಲ್ಲೆಗಳು ನಿರಾತಂಕವಾಗಿ ಮುಂದುವರೆದಿವೆ. ಕೋಮುವಾದ ಮುನ್ನೆಲೆಗೆ ಬಂದಿದೆ. ಅಭಿವ್ಯಕ್ತಿಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರಿಗಳು ಎಲ್ಲ ಕಡೆಯೂ ತಲೆ ಎತ್ತುತ್ತಿದ್ದು ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆತಂಕವನ್ನೂ ವಿವರಿಸಿದ್ದಾರೆ.

ಜೊತೆಗೆ ಇಂಥ ಬದಲಾದ ಪರಿಸ್ಥಿತಿಯಲ್ಲಿ ಒಂದುಕ್ಷಣ ನಿಂತು, 70-80ರ ದಶಕದ ಬಂಡಾಯ-ದಲಿತ ಚಳುವಳಿಯನ್ನು ಮರು ಪರಿಶೀಲಿಸಿದಾಗ, ನಮ್ಮ ನಾಡು ಕ್ಷಿಪ್ರವಾಗಿಯೇ ಕಳಕೊಂಡ ಕೆಲವು ಅಮೂಲ್ಯ ಅಂಶಗಳು ಅಚ್ಚರಿ ಹುಟ್ಟಿಸುತ್ತವೆ. ಬದುಕು, ಸಾಹಿತ್ಯ ಮತ್ತು ಚಳುವಳಿಗಳನ್ನು ಬೇರೆ ಬೇರೆಯಾಗಿ ನೋಡದ ದಿನಗಳವು. ಅಧ್ಯಾಪಕರಾಗಿದ್ದ ನಾವು ಹಲವರು ಅಧ್ಯಾಪನದ ಕೆಲಸವನ್ನು ಮುಗಿಸಿದ ಆನಂತರ ಬೀದಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದೆವು, ಪೋಸ್ಟರ್ಗಳನ್ನು ಅಂಟಿಸುತ್ತಿದ್ದೆವು, ವಾರಾಂತ್ಯದಲ್ಲಿ ಸಂಘಟಿಸುತ್ತಿದ್ದ ಅಧ್ಯಯನ ವೃತ್ತಗಳಲ್ಲಿ ನಮ್ಮ ಬೌದ್ಧಿಕ ಹಸಿವನ್ನು ತೀರಿಸಿಕೊಳ್ಳುತ್ತಿದ್ದೆವು. ಹೀಗೆಲ್ಲಾ ಮಾಡುವಾಗ ನಮಗೆ ಯಾವುದೇ ಭಯವಿರಲಿಲ್ಲ. ಇಂಥ ವಿಷಯಗಳ ಕುರಿತು ಮುಕ್ತ ಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಕೊಡುವುದು ಪ್ರಜಾಪ್ರಭುತ್ವವಾದೀ ಸರಕಾರಗಳ ಅತಿದೊಡ್ಡ ಜವಾಬ್ದಾರಿ ಎಂಬುದು ಆ ಕಾಲದ ನಮ್ಮ ನಂಬಿಕೆಯಾಗಿತ್ತು. ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ತೀಕ್ಷ್ಣಗೊಳಿಸಲು ಸರಕಾರಗಳು ಬೌದ್ಧಿಕ ಸಂವಾದಗಳನ್ನು ಪ್ರೋತ್ಸಾಹಿಸುತ್ತಿರಬೇಕು ಎಂದು ನಾವು ಕೂಗಿ ಹೇಳುತ್ತಿದ್ದೆವು ಎನ್ನುತ್ತಾರೆ. 70-80ರ ದಶಕದ ಸಾಹಿತ್ಯ, ಚಳುವಳಿ, ಬಂಡಾಯ, ಹೋರಾಟದ ಕುರಿತು ಈ ಕೃತಿಯಲ್ಲಿ ವಿವರಿಸುವ ಜೊತೆಗೆ ವಾಸ್ತವದೊಂದಿಗೆ ವಿಶ್ಲೇಷಿಸಿದ್ದಾರೆ.


sahitya
mattu
dalita
chaluvali
Bandaya

K894.9 PURB