ಡಾ. ಆರ್. ಸುನಂದಮ್ಮ ಅವರ ಹೆಣ್ಣು ಕಣ್ಣೋಟದ ವಿಮರ್ಶಾ ಲೇಖನಗಳನ್ನು ಈ ಕೃತಿಯೂ ಒಳಗೊಂಡಿದ್ದು, ಇದು ಇವರ ದ್ವಿತೀಯ ವಿಮರ್ಶಾ ಕೃತಿಯಾಗಿದೆ. ಇಲ್ಲಿರುವ 18 ಪ್ರಬಂಧಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ಗುಂಪು ಮಹಿಳೆಯ ಬದುಕಿನ ಬಹುಮುಖಿ ನಲೆಗಳನ್ನು ರೂಪಿಸಿದ, ಪ್ರಭಾವಿಸಿದ, ನಿಯಂತ್ರಿಸಿದ ಹಾಗೂ ನಿರ್ದೇಶಿಸಿದ ಸಮಾಜದ ವಿವಿಧ ಶಕ್ತಿಕೇಂದ್ರಗಳ ಉದ್ದೇಶ ಮತ್ತು ತಾತ್ವಿಕತೆಯ ಚರ್ಚೆಗೆ ಮೀಸಲಾದ ಲೇಖನಗಳಾಗಿವೆ. ಎರಡನೆಯದು ಜನಪದ ಕಾವ್ಯ, ನಡುಗನ್ನಡದ ಸಾಹಿತ್ಯವನ್ನು ಸ್ತ್ರೀವಾದಿ ನೆಲೆಯಿಂದ ವಿಶ್ಲೇಷಿಸುವ ಲೇಖನಗಳಾಗಿದೆ. ಉತ್ತರಾದೇವಿ ಯನ್ನು ಸ್ವಾಗತಿಸುತ್ತಾ ಸಂಗಾತಿ ಬಾರೇ ಸಾಧು ಮಣಿಯೇ ಬಾರೆ, ಸಂಗಾತಿ ಸೋತರ ಅಂಗೈಯಲ್ಲಿ ಮಡಿಗೇನು ಜಂಬು ನೇರಳ ತಿನಿಸೇನು ಸಂಗಾತಿ ನಿನ್ನ ರೂವ್ವ ಬರಸೇನು ಎಂದು ಭರವಸೆ ನೀಡುತ್ತಾಳೆ. ಆ ಭರವಸೆ ಹೆಣ್ಣು ಸಕಲ ಕುಲಕ್ಕೆ ನೀಡುವ ಭರವಸೆಯಾಗಿ, ಪದವನ್ನು ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ. ಮಹಿಳೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿ ಕೊಂಡಿದ್ದಾಳೆ. ಮತ್ತು ಅವಳು ನೋಡುವ ಸಮಾಜ ಮತ್ತು ಅವಳನ್ನು ನೋಡುವ ಸಮಾಜ ಎರಡನ್ನೂ ಈ ಕೃತಿಯಲ್ಲಿ ಮುಖಾಮುಖಿ ಗೊಳಿಸಲಾಗಿದೆ. ಹೇಗೆ ನಂಬಿಕೆಗಳು ನಿಧಾನಕ್ಕೆ ಮಹಿಳೆಯ ಶೋಷಣೆಗಳಿಗೆ ಬಳಕೆಯಾಗತೊಡಗಿತು ಎನ್ನುವುದನ್ನು ಜಾಗತಿಕ ಆಚಾರ, ವಿಚಾರಗಳನ್ನಿಟ್ಟುಕೊಂಡು ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ.