Kannada bandaya sahitya ಕನ್ನಡ ಬಂಡಾಯ ಸಾಹಿತ್ಯ
- Navadehali Sahity Akademi 2012
- xxvi,374
'ಕನ್ನಡ ಬಂಡಾಯ ಸಾಹಿತ್ಯ’ ಕೃತಿಯು ಸರಜೂ ಕಾಟ್ಕರ್ ಅವರ ಸಂಪಾದಿತ ಲೇಖನ ಸಂಕಲನವಾಗಿದೆ. ಬದುಕು ಹಸನಾಗಬೇಕು ಎಂಬ ಆಶಯದೊಂದಿಗೆ ಜನ್ಮ ತಾಳಿದ ಸಾಹಿತ್ಯವೇ ಬಂಡಾಯ ಸಾಹಿತ್ಯ. ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಪ್ರವೃತ್ತಿ, ಜನಪರ ವ್ಯವಸ್ಥೆ ಕಟ್ಟಲು ಮುಂದಾಗುವ ಹಂಬಲ ಮನುಷ್ಯನನ್ನು ಸಹಜವಾಗಿಯೇ ಬಂಡಾಯ ಏಳುವಂತೆ ಮಾಡುತ್ತದೆ. ಹೋರಾಟ-ಬದುಕು-ಬರಹಗಳ ಅನ್ಯನತೆ ಹೊಂದಿರುವ ಬಂಡಾಯ ಸಾಹಿತ್ಯ ಕಾಲಕ್ರಮೇಣ ಸಾಂಸ್ಕೃತಿಕ ಚಳವಳಿಯಾಗಿ ರೂಪುಗೊಂಡ ಬಗೆಯನ್ನು ಇಲ್ಲಿ ವಿವರಿಸಲಾಗಿದೆ.
ಒಂದು ಕಾಲದಲ್ಲಿ ಬಂಡಾಯದವರೆಂದರೆ ಪರಂಪರೆಯ ವಿರೋಧಿಗಳೆಂದು ಬಿಂಬಿತರಾಗಿದ್ದರು. ಆದರೆ ಅವರು ನಿಜವಾಗಿ ಸ್ಥಗಿತ ಸಂಪ್ರದಾಯದ ವಿರೋಧಿಗಳು ಎಂಬುದು ಕೃತಿಯಲ್ಲಿ ಸ್ಪಷ್ಟವಾಗುತ್ತದೆ. ಜಾತಿ ವ್ಯವಸ್ಥೆ, ಧಾರ್ಮಿಕ ವ್ಯವಸ್ಥೆಗಳ ಮಧ್ಯೆ ಕಾಯಕಕ್ಕೆ ಕೊಟ್ಟ ಮಹತ್ವ ನುಡಿರೂಪದಲ್ಲಿ ವ್ಯಕ್ತವಾದುದೇ ಬಂಡಾಯ ಸಾಹಿತ್ಯ ಎಂದು ಕಾಟ್ಕರ್ ಇಲ್ಲಿ ತಿಳಿಸಿದ್ದಾರೆ. ಶೋಷಿತರನ್ನು ಕ್ರಿಯಾಶೀಲರನ್ನಾಗಿಸುವಲ್ಲಿ ಈ ಸಾಹಿತ್ಯ ಹೇಗೆ ಪ್ರೇರಣೆಯಾಯಿತು, ಕನ್ನಡ ಬಂಡಾಯ ಸಾಹಿತ್ಯ ಸಾಮಾಜಿಕ ವ್ಯವಸ್ಥೆಯನ್ನು ಬೆತ್ತಲೆಗೊಳಿಸಿದ ಅಸಾಧಾರಣ ಸಾಧನ ಎಂಬುದಕ್ಕೆ ಇಲ್ಲಿ ಸಾಕಷ್ಟು ನಿದರ್ಶನಗಳನ್ನು ಅವರು ಕೊಟ್ಟಿದ್ದಾರೆ. ಎಡಪಂಥೀಯ ಸಿದ್ಧಾಂತಗಳು ಬಂಡಾಯ ಸಾಹಿತ್ಯದ ಮೇಲೆ ಹೇಗೆ ಪ್ರಭಾವ ಬೀರಿದವು. ಮಾರ್ಕ್ಸ್ವಾದ,ಲೋಹಿಯಾ ವಾದ, ಅಂಬೇಡ್ಕರ್ ವಾದ ಹೇಗೆ ಬಂಡಾಯ ದಲಿತ ಸಾಹಿತ್ಯಕ್ಕೆ ಪುಷ್ಟಿ /ಬರಹಗಾರರಿಗೆ ಪ್ರೇರಣೆ ನೀಡಿದವು ಎಂಬುದನ್ನು ಇಲ್ಲಿ ಸಮರ್ಪಕವಾಗಿ ಕಲೆಹಾಕಲಾಗಿದೆ. ಇನ್ನು ಪತ್ರಿಕೆಗಳು ಈ ಸಾಹಿತ್ಯವನ್ನು ಬೆಳೆಸಿದರ ಬಗ್ಗೆಯೂ ಇಲ್ಲಿ ವಿವರವಿದೆ.