ಶಿವರಾಮ ಕಾರಂತರ ಕುರಿತಂತೆ ಬಂದ ಸಂಶೋಧನಾ ಬರಹಗಳಿಗೆ ಮಿತಿಯಿಲ್ಲ. ಕಾರಂತರ ಸಾಹಿತ್ಯ ಅಧ್ಯಯನ ಮತ್ತೆ ಮತ್ತೆ ಮರು ವಿಮರ್ಶೆಗೆ ಒಳಗಾಗುತ್ತಲೇ ಇದೆ. ಅವರ ಸಾಹಿತ್ಯ ಕೃತಿಗಳೂ ಮರು ಓದಿನ ಮೂಲಕ ವರ್ತಮಾನದ ಸಂದರ್ಭಗಳಿಗೆ ಸಂವಾದಿಯಾಗುತ್ತಿವೆ. ಕಾರಂತರ ಕಾಲ ದುಡಿಮೆ, ಶ್ರಮಸಂಸ್ಕೃತಿಯ ಮೂಲಕ ರೂಪುಗೊಂಡಿರುವುದು. ಕಾರಂತರು ಕೃಷಿ ಪ್ರಧಾನ ಪರಿಸರದಿಂದ ಎದ್ದು ಬಂದವರು. ಆದುದರಿಂದಲೇ ಅವರ ಕಾದಂಬರಿಗಳಲ್ಲಿ ದುಡಿಮೆ, ಪ್ರಕೃತಿ, ಮಣ್ಣು., ಬೆವರು ವೈವಿಧ್ಯಮಯವಾಗಿ ನಿರೂಪಿಸಲ್ಪಟ್ಟಿದೆ. ದುಡಿಮೆ ಸಹಜವಾಗಿಯೇ ತಳಸ್ತರದ ಬದುಕಿನ ಕಡೆಗೆ ನಮ್ಮನ್ನು ಹೊರಳಿಸುತ್ತದೆ. ಕಾರಂತರ ಹಲವು ಪ್ರಮುಖ ಪಾತ್ರಗಳು ತಳಸ್ತರ ಸಮುದಾಯದಿಂದ ಎದ್ದು ಬರುವುದು ಇದೇ ಕಾರಣಕ್ಕೆ. ಪ್ರತೀ ಹೊಸ ತಲೆಮಾರೂ ಕಾರಂತರ ಕಾದಂಬರಿ ಜಗತ್ತಿಗೆ ಮುಖಾಮುಖಿ ಆಗುವಾಗ ಅವುಗಳಿಗೆ ಒಂದು ತಾತ್ವಿಕ ಹಿನ್ನೆಲೆಯನ್ನು ಒದಗಿಸುವ ಕೆಲಸವನ್ನು ಪ್ರಸ್ತುತ ಈ ವಿಮರ್ಶಾ ಕೃತಿ ಮಾಡಿದೆ.
ಕಾರಂತರ ಬದುಕಿನ ಅನುಭವ, ಕೆಲಸ, ಪ್ರಯೋಗಗಳು ಅವರ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ತನ್ನ ಕಾದಂಬರಿಗಳಲ್ಲಿ ಪ್ರಕೃತಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ.ಅವರ ಕೃತಿ ಮಾತ್ರವಲ್ಲ ಅವರ ಬದುಕು ಸಹ ವೈವಿಧ್ಯಮಯವಾಗಿದೆ.ಗಾಂಧೀಜಿಯಿಂದ ಪ್ರಭಾವಿತರಾಗಿದ್ದ ಕಾರಂತರು, ವೈಯಕ್ತಿಕ ಜೀವನ ಸಂದರ್ಭದಲ್ಲಿ ಹೇಗೆ ದುಡಿಮೆಯ ಅನ್ವೇಷಣೆ ನಡೆಸಿದ್ದರು ಅನ್ನುವುದನ್ನು ಲೇಖಕಿ ಚರ್ಚಿಸಿದ್ದಾರೆ.ದುಡಿಮೆಗೆ ಸಂಬಂಧಿಸಿದ ಕಾರಂತರ ದೃಷ್ಟಿಕೋನವನ್ನು ವಿವರಿಸಿದ ಲೇಖಕಿ ಕೃಷಿ ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಕಾರಂತರು ನೀಡಿದ ಸಲಹೆಗಳು, ಕೃಷಿ ಕ್ಷೇತ್ರದಲ್ಲಿ ಅವರು ಗುರುತಿಸಿದ್ದ ಕೊರತೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕಾರಂತರ ಕಾದಂಬರಿ ಮತ್ತು ಅವರ ಇತರ ಬರಹಗಳಲ್ಲಿ ಅಡಕವಾಗಿರುವ ಅಂಶಗಳನ್ನು ಕಾರಂತ ದುಡಿಮೆ ಪ್ರಪಂಚ' ಕೃತಿಯ ಮೂಲಕ ರೇಖಾ ವಿ.ಬನ್ನಾಡಿ ವ್ಯವಸ್ಥಿತವಾಗಿ ಜೋಡಿಸಿದ್ದಾರೆ