ಸಾಹಿತ್ಯ, ಸಂಸ್ಕೃತಿ ಕುರಿತು ನಡೆಸುವ ಶೋಧದ ಕಾರಣಕ್ಕೆ ರಂಗನಾಥ ಕಂಟನಕುಂಟೆ ಅವರ ’ಓದಿನ ಜಾಡು’ ಮುಖ್ಯವಾಗಿ ತೋರುತ್ತದೆ. ಒಟ್ಟು ೨೦ ಲೇಖನಗಳನ್ನು ಹೊಂದಿರುವ ಕೃತಿ ಹಲವು ಒಳನೋಟಗಳ ಮೂಲಕ ಸೆಳೆಯುತ್ತದೆ. ಹೊಸ ತಲೆಮಾರಿನ ವಿಮರ್ಶೆ ನವೀನ ಶೈಲಿಯಲ್ಲಿ ತಲೆ ಎತ್ತಿನಿಂತಂತೆ ಭಾಸವಾಗುತ್ತದೆ.
ಸಾಹಿತ್ಯ ಸೃಷ್ಟಿಯ ಸಾಂಸ್ಕೃತಿಕ ನೆಲೆಗಳು, ಸಂಸ್ಕೃತಿ ವಿಮರ್ಶೆಯಾಗಿ ಸಾಹಿತ್ಯದ ಓದು, ಸಾಂಸ್ಕೃತಿಕ ಓದಿನ ಪರಿಕಲ್ಪನೆಗಳ ತಾತ್ವಿಕ ತೊಡಕು, ಪರಿಕಲ್ಪನೆಗಳ ಅನುವಾದ ಮತ್ತು ವೈಚಾರಿಕತೆಯ ಗೊಂದಲ, ಮಂಟೇಸ್ವಾಮಿ ಪರಂಪರೆಯ ಮುಖಾಮುಖಿಯ ಸವಾಲು, ಜನಪದ ಸಾಹಿತ್ಯದ ಜನಪರತೆಯ ಕುರಿತ ಅನುಮಾನಗಳು, ಕನ್ನಡ ರಾಷ್ಟ್ರೀಯತೆ ಚಿಂತನೆಯ ಹೆಜ್ಜೆಗುರುತುಗಳು, ಕಿ.ರಂ ಕಣ್ಣಲ್ಲಿ ಸಾಹಿತ್ಯದ ಓದು, ಲಂಕೇಶ್-ಚೈತನ್ಯದ ನೆಲೆಗಳ ಶೋಧಕ ರೀತಿಯ ಲೇಖನಗಳ ಮೂಲಕ ಕೃತಿ ಸಾಹಿತ್ಯಾಸಕ್ತರನ್ನು ಸೆಳೆಯುತ್ತದೆ. ವರ್ತಮಾನವನ್ನು ಕಾಡುತ್ತಿರುವ ಹಲವು ವಿಚಾರಗಳು ಮತ್ತು ಸಾಹಿತ್ಯಿಕ ಸಾಂಸ್ಕೃತಿಕ ತೊಡಕುಗಳ ಹಿನ್ನೆಲೆಯಲ್ಲಿ ಇಲ್ಲಿನ ಬರಹಗಳು ರೂಪು ತಳೆದಿವೆ. ಕನ್ನಡ ಕಥನಗಳಲ್ಲಿ ಭಾಷೆಯ ಬಳಕೆ ಮತ್ತು ಕನಕನ ಬಗೆಗೆ ಬರೆದ ಲೇಖನಗಳು ರಂಗನಾಥರ ವಿಮರ್ಶಾ ಸಾಮರ್ಥ್ಯವನ್ನು ಎತ್ತಿ ಹಿಡಿಯುವಂತಿವೆ.