ಪತ್ರಕರ್ತ ರವಿ ಬೆಳಗೆರೆ ಅವರ ಕಾದಂಬರಿ-ಸರ್ಪ ಸಂಬಂಧ.ವಿಷಯ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಸಂಭಾಷಣೆಯ ಸೂಕ್ಷ್ಮತೆ-ಪ್ರಖರತೆ ಇತ್ಯಾದಿ ಅಂಶಗಳಿಂದ ಈ ಕಾದಂಬರಿಯತು ಓದುಗರ ಗಮನ ಸೆಳೆಯುತ್ತದೆ. ಹಾವುಗಳು ! ಅಬ್ಬಾ ಅವೆಂದರೆ ಯಾರಿಗಿರುವುದಿಲ್ಲ ಹೆದರಿಕೆ ! ಮೂಳೆಯಿಲ್ಲದ ಪ್ರಾಣಿ ಹರಿದಾಡುವುದನ್ನು ನೋಡಿದರೆ ಹೆದರಿ ಅಂಜಿ ನೀರಾಗಿರುತ್ತೇವೆ. ಅಂಥಹ ಸರ್ಪದ ಮೇಲೆ ಚ್ಯುತಿ ಬರದಂತೆ ಇಂಚಿಂಚು ಸಾರಾ ಸಗಟಾಗಿ ವಿವರಿಸಿ, ಪುಸ್ತಕದ ಪುಟ ಪುಟದಲ್ಲು ಒಂದು ತಿರುವು ಕೊಟ್ಟು, ಪುಟ ತಿರುಗಿಸುವಂತೆ ಮಾಡಿದ ಬೆಳೆಗೆರೆ ಅವರ ಆಲೋಚನಾ ಶಕ್ತಿ, ಲೇಖಕನ ಆಂತರ್ಯದಲ್ಲಡಗಿರುವ ಕಲ್ಪನಾ ಲೋಕದ ಸಾಮರ್ಥ್ಯವನ್ನು ಕಣ್ಣೆದುರಿಗಿರಿಸುತ್ತದೆ. ಅಗ್ನಿನಾಥನಂತಹ ಅಘೋರಿ ಸಾಧಕನೊಬ್ಬನು ಮಾಡಿದ ಸಾಹಸ , ಅವನ ಸಿಧ್ಧಿಗಳು, ಅಘೋರಿಗಳ ಜೀವನ ಇವೆಲ್ಲವನ್ನು ಅಣು ಅಣುವಾಗಿ ಬಿಚ್ಚಿಟ್ಟಿದ್ದಾರೆ.