‘ಮಿತ್ತಬೈಲ್ ಯಮುನಕ್ಕೆ' ಒಂದು ಗುತ್ತಿನ ಕತೆ. ಗುತ್ತಿನ ಪಾತ್ರಗಳೇ ಇಲ್ಲಿ ಮುಖ್ಯವಾಗುತ್ತವೆ. ಆಂತರಿಕ ವಿಮರ್ಶಕರಾಗಿ ಗುತ್ತಿನ ಸಂಸ್ಕೃತಿ-ಅಪಸಂಸ್ಕೃತಿ, ಆಚಾರ-ಅನಾಚಾರ, ಮೌಲ್ಯ-ಅಪಮೌಲ್ಯ, ಆರೋಹಣ-ಅವರೋಹಣಗಳನ್ನು ಚಿತ್ರಿಸುವುದು ಆನಂದಕೃಷ್ಣರಿಗೆ ಸಾಧ್ಯವಾಗಿದೆ. ಈ ಕಾದಂಬರಿಯ ಮೂರು ಮುಖ್ಯ ಪಾತ್ರಗಳಾದ ಮಂಜಣ್ಣೆ, ಸುಬ್ಬಯಣ್ಣೆ, ಯಮುನಕ್ಕೆ ಮಿತ್ತಬೈಲ್ ಗುತ್ತಿನ ಮುಖ್ಯ ವ್ಯಕ್ತಿಗಳು. ಸಂಕಮಕ್ಕನ ಮಕ್ಕಳಾದ ಮಂಜಣ್ಣೆ-ಕಿಂಕೆನೆ ಮಿತ್ತಬೈಲಿನಲ್ಲಿ ದುಡಿದು ಕೃಷಿ ಮಾಡಿ ಯಶಸ್ಸು ಗಳಿಸುತ್ತಾರೆ. ಮಂಜಣ್ಣ ಮಾಯಿಪ್ಪಾಡಿ (ಕುಂಬಳೆ) ಅರಮನೆಯ ಸೇನೆ ಸೇರಿ ದಣ್ಣಾಯಕನಾಗುತ್ತಾನೆ. ಕಲ್ಯಾಣಪ್ಪನ ಕಾಟಕಾಯಿ (೧೮೩೭) ಯ ಸಂದರ್ಭದಲ್ಲಿ ಮಾಯಿಪ್ಪಾಡಿಯ ಅರಸ ಬ್ರಿಟೀಷರ ಪರವಾಗಿರುತ್ತಾನೆ. ಮಂಜಣ್ಣ-ದುರ್ಗಾರ ದಾಂಪತ್ಯೇತರ ಸಂಬಂಧವನ್ನು ಲೇಖಕರು ಚಿತ್ರಿಸಿದ್ದಾರೆ. ಹಿಂಸೆಯಿಂದ ಅಹಿಂಸೆಯತ್ತ ಚಲಿಸುವ, ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುವ ಪಾತ್ರಗಳು ಈ ಕಾದಂಬರಿಯಲ್ಲಿವೆ. ಇಚ್ಲಂಪಾಡಿ ಮನೆಯಲ್ಲಿ ರುಕ್ಮಿಣಿಯಮ್ಮನ ಕಿವಿ ಮಾತು ಕೇಳಿದ ಕಲ್ಯಾಣ ಸ್ವಾಮಿ ತನ್ನ ತಪ್ಪು ತಿದ್ದಿಕೊಳ್ಳುತ್ತಾನೆ. ಕೊಲೆ, ಗೂಂಡಾಗಿರಿಯನ್ನು ಸಮರ್ಥಿಸುತ್ತಿದ್ದ ಯಮುನಕ್ಕೆ ಕೊನೆಯಲ್ಲಿ ಪಶ್ಚಾತ್ತಾಪ ಪಡುತ್ತಾಳೆ. ಹಿಂಸೆಯ ಸಂಕೇತವಾಗಿದ್ದ ಬೀರಣ್ಣನ ಬೆತ್ತ ಸುಬ್ಬಯಣ್ಣನ ಮೂಲಕ ಗಾಂಧೀಜಿಯ ಕೈಸೇರುವುದು ಸಾಂಕೇತಿಕವಾಗಿದೆ. ಅಸ್ಪ್ರಶ್ಯತೆಯ ವಿರುದ್ಧ ತನ್ನ ಹೋರಾಟದಲ್ಲಿ ಗಾಂಧೀವಾದಿ ಸುಬ್ಬಯಣ್ಣ ಸ್ವಲ್ಪ ಯಶಸ್ಸುಗಳಿಸುತ್ತಾನೆ.