ಇದು ಲೇಖಕ ಪತ್ರಕರ್ತ ರವಿ ಬೆಳಗೆರೆಯವರ ಹಾಯ್ ಬೆಂಗಳೂರು ವೀಕ್ಲಿಗಾಗಿ ಬರೆಯುತ್ತಿದ್ದ ಲೇಖನಗಳ ಸಂಗ್ರಹವಾಗಿದೆ. ಸಾಮಾಜಿಕ, ರಾಜಕೀಯ ಮತ್ತು ಇತರೆ ರಂಗದಲ್ಲಿ ನಡೆಯುತ್ತಿದ್ದ ಆಗು ಹೋಗುಗಳ ಮೇಲಿನ ಅವರ ಟೀಕೆ ಟಿಪ್ಪಣಿಗಳ ಶೈಲಿ ಮತ್ತು ವಿಷಯ ಓದುಗರನ್ನು ಸೆಳೆಯುತ್ತವೆ. ಅನೇಕ ವರ್ಷಗಳ ಹಿಂದೆ (5.6.96) ನಾನು ಛತ್ರವೊಂದರ ರೂಮಿನಲ್ಲಿ ಮದುವೆ ಗಂಡಾಗಿ ಕುಳಿತಿದ್ದೆ. ಮಾತು ಕೊಟ್ಟಂತೆ ಬಂದ ನನ್ನ ಅತ್ಯಂತ ಆತ್ಮೀಯ ಗೆಳೆಯ ಜಯಮಾದಪ್ಪ ಮಾತೊಂದೂ ಆಡದೆ ನನ್ನ ಕೈಗೆ ಪತ್ರಿಕೆಯೊಂದನ್ನು ಕೊಟ್ಟ. ಮಾಮೂಲಿಯಾಗಿ Wish ಮಾಡುವುದನ್ನು ಮೀರಿದ್ದ ಗೆಳೆತನ ನನ್ನ ಅವನದು. ಹುಟ್ಟಾ ಓದುಗನಾಗಿದ್ದ ನಾನು ಎರಡನೇ ಪುಟದಿಂದಲೇ ಆರಂಭಿಸಿದೆ. ಅಷ್ಟೇ ನನ್ನ ಸುತ್ತಲಿನ ಬಂಧುಗಳು, ನೆಂಟರು, ಮದುವೆ ಮನೆ ಗಲಾಟೆ ಎಲ್ಲ ಇಲ್ಲವಾದ ಅನಿಸಿಕೆಯಲ್ಲಿ ಕೇವಲ ನಾನಾಗಿ 'ಖಾಸ್ಬಾತ್' ಎಂಬ ಆತ್ಮೀಯ ವೆನಿಸುವ ಲೇಖನದಲ್ಲಿ ಬೆರೆತು ಹೋದೆ. ಸ್ವಲ್ಪ ಹೊತ್ತಿಗೆ, 'ಖಾಸ್ಬಾತ್'ನ ಗುಂಗಿನಲ್ಲಿರುವಂತೆಯೇ ಮದುವೆ ಆಯ್ತು. ಊರಿಗೆ ಬರುವಾಗ ಇಬ್ಬರು ಗೆಳತಿಯರು-ಒಬ್ಬಳು ಕಪ್ಪು-ಬಿಳುಪು ಸುಂದರಿಯಾದರೆ ಇನ್ನೊಬ್ಬಳು ಬಣ್ಣಗಳ ಸಮ್ಮೇಳನ. ಒಂದು ಭಾವ ಇನ್ನೊಂದು ಜೀವ. -ಸಿದ್ದಲಿಂಗೇಗೌಡ, ಕುಂಬ್ರಳ್ಳಿ ಮಠ